Thursday, January 29, 2009

ನೀರ ನಿಶ್ಚಿಂತೆಯ ಮೂಕ ಸಾಕ್ಷಿ



ಅದು ಆಂಧ್ರಪ್ರದೇಶ. ವಾರಂಗಲ್ ಜಿಲ್ಲೆಯ ಏನಬಾವಿ. ಸಂಪೂರ್ಣ ಸಾವಯವ ಗ್ರಾಮ. ಯಾರದೋ ಮನೆಯ ಜಗಲಿಯಲ್ಲಿ ಕುಳಿತಿದ್ದೆವು. ಎದುರು ಮನೆಯಲ್ಲಿನ ಅಕ್ಕಿ ಮುಡಿಯಂತಹ ಎರಡು ವಸ್ತುಗಳು ಗಮನ ಸೆಳೆದುವು.

ಹೋಗಿ ವಿಚಾರಿಸಿದರೆ ಅದು ಏತದ ಮೂಲಕ ನೀರೆತ್ತುವ ಉಪಕರಣ. ಕಬ್ಬಿಣದ ತಗಡಿನದು. ತುಕ್ಕು ಹಿಡಿದು ಜೀರ್ಣವಾಗುತ್ತಲಿತ್ತು. ಈ ಗ್ರಾಮದಲ್ಲಿ ನಾಲ್ಕು ದಶಕದ ಹಿಂದೆ ಇವು ಧಾರಾಳ ಬಳಕೆಯಲ್ಲಿದ್ದುವಂತೆ. ೨೫-೩೦ ವರ್ಷ ಹಿಂದೆ ಊರಿಗೆ ವಿದ್ಯುತ್ ಬರುವ ವರೆಗೂ ಇಲ್ಲಿನ ಹೊಲಗಳಿಗೆ ನೀರೆತ್ತಿ ಉಣಿಸಿದ್ದು ಇವುಗಳೇ. ಎತ್ತಿನ ಬಲದಿಂದ ಏತ ನಡೆಯುತ್ತಿತ್ತು.

ಕಾಲಚಕ್ರ ಉರುಳಿದೆ.ಏತ ಮರೆತುಹೋಗಿದೆ. ಆದರೆ ಈ ರೈತ, ಮಲ್ಲೇಶ ಈ ನೀರೆತ್ತುವ ಉಪಕರಣಕ್ಕೊಂದು ಹೊಸ ಕೆಲಸ ಕೊಟ್ಟ. ಕೋಳಿಗೂಡು.ಕೋಳಿಗಳಿಂದಾಗಿ ಇವು ಉಳಕೊಂಡುವು.

ವಿಷಚಕ್ರದಿಂದ ಬಿಡಿಸಿಕೊಂಡ ಏನಬಾವಿ ಈಗ ಮರಳಿ ಬಾಹ್ಯ ಒಳಸುರಿಗಳ ಅವಲಂಬನೆಯಿಲ್ಲದೆ ಕೃಷಿ ನಡೆಸಹತ್ತಿದೆ. ಕಳೆದೆರಡೂ ವರ್ಷಗಳಲ್ಲಿ ನೈಸರ್ಗಿಕ ಕೀಟನಾಶಕಗಳನ್ನೂ ಬಳಸಬೇಕಾಗಿ ಬಂದಿಲ್ಲ ಎನ್ನುತ್ತಾರೆ ಈ ರೈತರು. ಏನಬಾವಿಗೆ ಈಗ ’ಹಳೆಯ ಕಾಲದ ಒಳಿತುಗಳನ್ನು’ ನೆನಪಿಸಿಕೊಳ್ಳುವ ಕುತೂಹಲ.ಮಾನವಶಕ್ತಿಯಿಂದ ನೀರೆತ್ತುವ ತ್ರಾಸ ಅದೆಷ್ಟೇ ಇದ್ದರೂ ಆಗ ನೀರ ನಿಶ್ಚಿಂತೆಯೂ ಇತ್ತು ಎನ್ನುವುದನ್ನು ಈ ’ಕೋಳಿ ಗೂಡು’ ಕೆಲವು ಅಜ್ಜಂದಿರಿಗಾದರೂ ನೆನೆಪಿಸಿಕೊಟ್ಟೀತು.

ಮಲ್ಲೇಶರ ಈ ’ಕೋಳಿಗೂಡಿಗೆ’ ಪುರಾತನ ವಸ್ತುಗಳ ಸಂಗ್ರಹಾಲಯಕ್ಕೆ ಭಡ್ತಿ ಹೊಂದಲು ಬೇಕಾದ ಎಲ್ಲಾ ಗುಣಗಳೂ ಇವೆ!

Wednesday, January 28, 2009

ಜಲಸಾಕ್ಷರತೆಯಲ್ಲಿ ಮಂಗಳೂರು ಆಗ್ನೆಸ್ ಕಾಲೇಜಿನ ಮೇಲ್ಪಂಕ್ತಿ



ಮಂಗಳೂರಿನ ಸಂತ ಆಗ್ನೆಸ್ ಕಾಲೇಜು ನೀರಿನ ವಿಷಯದಲ್ಲಿ ತೆಗೆದುಕೊಳ್ಳುವ ಆಸಕ್ತಿ ನಿಜಕ್ಕೂ ಅನುಕರಣೀಯ. ವರ್ಷಗಳ ಹಿಂದೆ ಈ ಕಾಲೇಜು ವಾಮಂಜೂರಿನ ಬಳಿಯ ಕಿರಾಮ್ ಎಂಬ ಹಳ್ಳಿಯಲ್ಲಿ ಅಲ್ಲಿನವರನ್ನು ಪ್ರೇರೇಪಿಸಿ ಮಾಡಿದ ಜಲಾನಯನ ಅಭಿವೃದ್ಧಿಗೆ ಜಿಮ್ ಕಾರ್ಟರ್ ಅಂತಾರಾಷ್ಟ್ರೀಯ ಪ್ರಶಸ್ತಿ ಬಂದಿತ್ತು.

ಕಾಲೇಜು ತನ್ನ ಎಲ್ಲಾ ಶೈಕ್ಷಣಿಕ ವಿಭಾಗಗಳ ಮೂಲಕ ನೀರಿನ ಒಂದಲ್ಲ ಒಂದು ಅಧ್ಯಯನ ಮಾಡಿಸಿದೆ.ಮಂಗಳೂರಿನ ವಿವಿಧ ಕಡೆಗಳ ಬಾವಿ ನೀರಿನ ಮಾದರಿಗಳನ್ನು ವಿಶ್ಲೇಷಿಸಿದೆ. ಇದರಲ್ಲಿ ಹೆಚ್ಚಿನವುಗಳಲ್ಲಿ ಈ-ಕೊಲಿ ಇರುವುದು ಪತ್ತೆಯಾಗಿದೆ. ಹಾಗೆಯೇ ಒಂದಷ್ಟು ಮನೆಗಳಲ್ಲಿ ನೀರಿನ ದೈನಂದಿನ ಬಳಕೆಯ ಬಗ್ಗೆ ಸಮೀಕ್ಷೆ.

ಗುಡ್ಡದ ನೆತ್ತಿಯ ಮೇಲೆ ಇರುವ ಆಗ್ನೆಸ್ ಕಾಲೇಜಿನಲ್ಲಿ ನೀರ ಸಮಸ್ಯೆಇದೆ. ಸುಮಾರು ಏಳೆಕ್ರೆಯಷ್ಟು ವಿಶಾಲವಾದ ಈ ಕ್ಯಾಂಪಸಿನಲ್ಲಿ ಏಳು ತೆರೆದ ಬಾವಿ, ಒಂದು ಕೊಳವೆಬಾವಿ ಇದೆ. ಹೆಚ್ಚು ಮಳೆನೀರು ಹೊರಹರಿದು ಹೋಗುವ ಜಾಗಗಳಲ್ಲಿ ಅದನ್ನು ಇಂಗಿಸುವ ಕೆಲಸವನ್ನೂ ಮಾಡಿದೆ. ಹಿಂದೆಯೂ ಇಂಥ ಕೆಲಸ ಸ್ವಲ್ಪ ಮಾಡಿತ್ತು. ಆದರೆ ಅದು ಬಾವಿಗಳನ್ನು ಲಕ್ಷ್ಯವಿಟ್ಟು ಮಾಡದ ಕಾರಣ ಅಷ್ಟು ಫಲ ಸಿಕ್ಕಿರಲಿಲ್ಲ. ಈ ಬಾರಿ ಇಲ್ಲಿನ ವಾಚನಾಲಯದ ಬಳಿಯ ಬಾವಿಯ ಹತ್ತಿರ ತುಂಬ ನೀರಿಂಗಿಸಿದ್ದಾರಂತೆ. ‘ಮುಂದಿನ ವರ್ಷ ಇದರ ರಿಸಲ್ಟ್ ಬರಬಹುದು’ಎಂಬ ನಿರೀಕ್ಷೆಯಲ್ಲಿದ್ದಾರೆ ಪ್ರಾಂಶುಪಾಲೆ ಸೋದರಿ ಪ್ರೇಮ್ ಡಿ ಸೋಜಾ.

ಕಾಲೇಜ್ ಡೇಗೆ ಸಂಬಂಧಿಸಿ ’ಜಲ್ ಜೀವನ್ ಹೈ’ ಎಂಬ ಅರ್ಥಗರ್ಭಿತ ಹಿಂದಿ ನಾಟಾಕವನ್ನು ಇಲ್ಲಿನ ವಿದ್ಯಾರ್ಥಿನಿಯರು ಪ್ರದರ್ಶಿಸಿದ್ದು ಇನ್ನೊಂದು ವಿಶೇಷ. ಕಾಲೇಜು ಹಿಂದಿ ನಾಟಕ ಅವತರಿಸಿದ್ದು ಇದೇ ಮೊದಲಂತೆ. ಹಿಂದಿ ಪ್ರಾಧ್ಯಾಪಕ ನಾಗೇಶ್ ಅವರ ಈ ನಿಜಕ್ಕೂ ಶ್ಲಾಘನೀಯ.

ಇನ್ನೂ ಒಂದು ವಿಶೇಷ ಎಂದರೆ ಇತರ ಹಲವು ವಿಭಾಗಗಳ ವಸ್ತುಸಂಗ್ರಹಾಲಯದ ಜತೆ ’ಜಲತರಂಗ’ ಎನ್ನುವ ವಾಟರ್ ಮ್ಯೂಸಿಯಮನ್ನೂ ಕಾಲೇಜು ತೆರೆದಿದೆ. ಇಲ್ಲಿ ಮಳೆಕೊಯ್ಲಿನ ಯಶೋಗಾಥೆಗಳ ಫೋಟೋ ಆಲ್ಬಂ, ಸೀಡಿ, ಮಾದರಿಗಳು ಇತ್ಯಾದಿ ಪ್ರದರ್ಶನಕ್ಕಿವೆ. ಮುಂದೆ ಈ ಮ್ಯೂಸಿಯಂ ಇನ್ನೂ ಸುಸಜ್ಜಿತವಾಗಲಿದೆ. ‘ಸಮಾಜಕ್ಕೆ ಈ ತಿಳಿವಳಿಕೆ ಕೊಡುವುದು ಹೇಗೆ ಎಂದು ಚಿಂತಿಸಿದಾಗ ಇದರ ಅಗತ್ಯ ಕಂಡುಬಂತು’ ಎನ್ನುತ್ತಾರೆ ಸೋದರಿ ಪ್ರೇಮ್.

ಸಂತ ಆಗ್ನೆಸ್ ಕಾಲೇಜ್ ಉಳಿದೆಲ್ಲಾ ಶಿಕ್ಷಣಗಳ ಜತೆ ಬದುಕಿಗೆ ಅತ್ಯಗತ್ಯವಾದ ಜಲ ಸಾಕ್ಷರತೆಯನ್ನೂ ಕಲಿಸುತ್ತಾ ಉಳಿದ ಕಾಲೇಜುಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದೆ.

Saturday, January 17, 2009

ನಗೆ ಕೊಯ್ಲು



ಈ ಕೊಯ್ಲು ಮಾಡಿದವರು ಗೆ(ಳತಿ)ಳೆಯ ಹರಿಣಿ

Friday, January 16, 2009

ಕೊಕ್ಕರ್ಣಿ ಎಂಬ ಕೃಷಿ ಹೊಂಡ







ಕೊಕ್ಕರ್ಣೆ ಉಡುಪಿ ಜಿಲ್ಲೆಯ ಒಂದು ಊರು. ನನಗಿದು ಬಹುವಾಗಿ ನೆನಪಾದದ್ದು ಮೊನ್ನೆಮೊನ್ನೆ ಪಾಲಕ್ಕಾಡಿನ ಬಳಿಯ ಸಾವಯವಕ್ಕೆ ತಿರುಗುತ್ತಿರುವ ಹಳ್ಳಿ ಎರುಮೆಯೂರಿಗೆ ಹೋಗಿದ್ದಾಗ. ಇಲ್ಲಿನ ಮುಖ್ಯ ಬೆಳೆ ಭತ್ತ. ಇದು ಮಳೆಯಾಶ್ರಯದ ಬೆಳೆ. ಸುಮಾರು ನೂರೆಕರೆ. ೬೯ ರೈತಕುಟುಂಬ.

ಎರಡು ಗುಡ್ಡಗಳ ನಡುವಿನ ತಗ್ಗಿನ ಭಾಗದಲ್ಲಿ ಊರಿನ ಎಲ್ಲರ ಹೊಲಗಳೂ ಇವೆ. ಎರಡನೆ ಬೆಳೆಗೆ ನೀರಿನ ಕೊರತೆ. ಇಲ್ಲಿನ ವಾರ್ಷಿಕ ಮಳೆ ೧೨೦೦ ಮಿ.ಮೀ. ದೊಡ್ಡ ಸಮಸ್ಯೆಯೆಂದರೆ ಇಲ್ಲಿನ ಗುಡ್ಡಗಳಲ್ಲಿ ಬಂಡೆಗಳೇ ತುಂಬಿವೆ. ಮಣ್ಣು ಇರುವ ಜಾಗ ಅತ್ಯಲ್ಪ. ಹಾಗಾಗಿ ಗುಡ್ಡಗಳಲ್ಲಿ ಮಳೆಕೊಯ್ಲು ಮಾಡಿ ಅಥವಾ ತಲೆಕೊಳ ನಿರ್ಮಿಸಿ ಗದ್ದೆಗಳಲ್ಲಿ ಹೆಚ್ಚು ಕಾಲ ತೇವಾಂಶ ಇರುವಂತೆ ಮಾಡುವ ಅವಕಾಶ ಕಡಿಮೆ.

ಕೆಲವು ಹೊಲಗಳು ಇಷ್ಟರಲ್ಲಿಯೇ ಕರಟಿಬಿಟ್ಟಿದ್ದುವು. ನೋಡುತ್ತಾ ಹೋದಂತೆ ಅಲ್ಲಿಲ್ಲಿ ಕೆಲವು ಹೊಲದ ಅಂಚಿನಲ್ಲಿ ಪುಟ್ಟ ಹೊಂಡ, ನೀರು ಕಂಡಿತು. ಈ ಹೊಂಡಗಳಿಗೆ ಇಲ್ಲಿ ’ಕೊಕ್ಕರ್ಣಿ’ ಎಂದು ಹೆಸರು. ಇದು ಚಿಕ್ಕ ಕೆರೆ ಅಥವಾ ದೊಡ್ಡ ಹೊಂಡ. ಬೇಕಿದ್ದರೆ ಫಾರ್ಮ್ (ಕೃಷಿ ಹೊಂಡ) ಅಂತ ಕರೆಯಬಹುದು. ಪ್ರತಿ ರೈತರೂ ಇಂಥ ಕೊಕ್ಕರ್ಣಿ ರಚಿಸಿಕೊಂಡು ಮಳೆನೀರು ತುಂಬಿಟ್ಟರೆ ನೀರಸಮಸ್ಯೆ ಕುಗ್ಗಬಹುದು. ಗದ್ದೆಯ ಮೇಲ್ಭಾಗದಲ್ಲಿ ಇವನ್ನು ರಚಿಸಬೇಕು. ಆಗ ಈ ನೀರಾಶ್ರಯದಿಂದಾಗಿ ಕೆಳಭಾಗದಲ್ಲಿ ತೇವಾಂಶ ಹೆಚ್ಚು ಕಾಲ ಉಳಿಯುತ್ತದೆ. ಒಂದೋ ಎರಡೋ ರಕ್ಷಕ ನೀರಾವರಿ ( ಪ್ರೊಟೆಕ್ಟಿವ್ ಇರಿಗೇಶನ್) ಬೇಕಾದರೆ ಕೊಡಬಹುದು.

ಇಡೀ ಹಳ್ಳಿಯಲ್ಲಿ ಈಗ ಹತ್ತಿಪ್ಪತ್ತು ಕೊಕ್ಕರ್ಣಿ ಇರಬಹುದು. ಪ್ರತಿ ಕುಟುಂಬವೂ ಒಂದೊಂದು ಮಾಡಿಕೊಂಡರೆ ಎಲ್ಲ ಹೊಲಗಳಲ್ಲೂ ಹೆಚ್ಚು ಕಾಲ ನೀರ ಪಸೆ ಉಳಿದೀತು. ಇದಲ್ಲದೆ ಎರಡನೆ ಬೆಳೆಗೆ ಸ್ವಲ್ಪ ಹೃಸ್ವಾವಧಿಯ ಭತ್ತದ ತಳಿ ಬಳಸುವ, ಶ್ರೀ ಪದ್ಧತಿ ಅನುಸರಿಸುವ ಸಲಹೆಯನ್ನೂ ಕೊಟ್ಟೆವು.

ಕೊಡಗಿನ ಭತ್ತದ ಗದ್ದೆಗಳಿಗೆ ಬೆಂಬಲವಾಗಿ ಹಿಂದೆ ಇಂಥ ಕೆರೆಗಳು ಪಕ್ಕದ ಎತ್ತರದ ಗುಡ್ಡದಲ್ಲಿರುತ್ತಿದ್ದುವು. ಇವು ತಲೆಕೊಳಗಳು. ಅಥವಾ ಪರ್ಕೊಲೇಶನ್ ಪಾಂಡ್‍ಗಳು. ಇವುಗಳ ಕೊಡುಗೆಯನ್ನು ಅರ್ಥ ಮಾಡಿಕೊಳ್ಳದೆ ಹಲವು ರೈತರು ಅವನ್ನು ಮುಚ್ಚಿದ್ದಾರೆ.

ಇಲ್ಲಿ, ಎರುಮಯೂರಿನಲ್ಲಿ ಪಕ್ಕದ ಗುಡ್ಡವಿಡೀ ಕಲ್ಲಾದ ಕಾರಣ ಈ ಮಳೆನೀರಿನ ಹೊಂಡವನ್ನು ಗದ್ದೆಯಲ್ಲೇ ಮಾಡಿದ್ದಾರೆ. ಬಿಹಾರದ ಕೆಲವೆಡೆ ಈ ರೀತಿಯ ಕೊಕ್ಕರ್ಣಿಗಳನ್ನು ಅಲ್ಲಿನ ಪ್ರದಾನ್ ಎಂಬ ಸ್ವಯಂಸೇವಾ ಸಂಘಟನೆ ಪ್ರಚಾರ ಪಡಿಸಿದೆ. ಇದಕ್ಕೆ ೫% ಮಾಡೆಲ್ ಅಂತಲೇ ಹೆಸರು. ಒಂದೆಕರೆ ಗದ್ದೆಯಲ್ಲಿ ಐದು ಸೆಂಟ್ಸನ್ನು ಮಳೆನೀರು ಹಿಡಿದಿಡಲು ಬಳಸುವುದು ಇಲ್ಲಿನ ತತ್ವ.

ಈ ತತ್ವ ಕರ್ನಾಟಕದ ಗದ್ದೆಗಳಿಗೂ ನೀರನಿಶ್ಚಿಂತೆ ಕೊಡಬಲ್ಲುದು. ಹೊಲದಲ್ಲಿ ರಚಿಸುವುದಕ್ಕಿಂತಲೂ ಹೆಚ್ಚಾಗಿ ಪಕ್ಕದಲ್ಲೇ ಗುಡ್ಡವಿದ್ದು ಅವರವರ ಜಮೀನೂ ಇದ್ದರೆ ಅಲ್ಲಿ ’ಕೊಕ್ಕರ್ಣಿ’ ಮಾಡಿಕೊಂಡರೆ ನೀರಲಾಭ ಇನ್ನೂ ಹೆಚ್ಚು.

Thursday, January 15, 2009

ಪುಟ್ಟ ರೈತ ತಡೆಗಟ್ಟ




ಪಾಲಕ್ಕಾಡ್ ಜಿಲ್ಲೆಯ ಹಳ್ಳಿ ಎರುಮಯೂರಿನಲ್ಲಿ ಕಂಡ ಪುಟ್ಟ ರಚನೆಗಳಿವು. ಚಿಕ್ಕ ಕಣಿಗಳಲ್ಲಿ ನೀರನ್ನು ತಡೆದು ನಿಲ್ಲಿಸಲು ಈ ರೈತ ಬಳಸಿದ ಉಪಾಯ ನೋಡಿ.
ಸಾಮಾನ್ಯವಾಗಿ ಇಂಥ ಪುಟ್ಟ ತಡೆಗಟ್ಟಕ್ಕೆ ಅಡಿಕೆ ಮರದ ಸಲಿಕೆ ಅಥವಾ ಗಿಡಮರಗಳ ಗೆಲ್ಲು ಅಥವಾ ಬರೇ ಮಣ್ಣು ಬಳಸುವುದು ವಾಡಿಕೆ. ಆದರೆ ಇವರು ಮರಳ ಚೀಲಕ್ಕೆ ಮಣ್ಣು / ಮರಳು ತುಂಬಿ ಸುಲಭದಲ್ಲಿ ಈ ರಚನೆ ಮಾಡಿಕೊಂಡಿದ್ದಾರೆ.

Monday, January 12, 2009

ಸಾವಯವ ಕೃಷಿಗೆ ಶಾರ್ಟ್ ಕಟ್



ವಾರಂಗಲ್ ಜಿಲ್ಲೆಯ ಏನಬಾವಿ ಹೈದರಾಬಾದಿನಿಂದ ಮೂರು ತಾಸು ದೂರ.ಐವತ್ತು ಕುಟುಂಬಗಳ ಸಾವಯವ ಸಾವಯವ ರಾಸಾಯನಿಕ ಕಿತನಾಶಕಗಳಿಗೆ ನೂರಕ್ಕೆ ನೂರು ಸಾವಯವ. ಆಂಧ್ರದಲ್ಲಿ ಸಾವಯವ ಕೃಷಿ ಜನಪ್ರಿಯಗೊಳಿಸುವ ಒಂದು ಜಾಣ್ಮೆ 'ಎನ್.ಪಿ.ಎಂ' ಎಂದರೆ ನಾನ್ ಪೆಸ್ಟಿಸೈಡಲ್ ಮ್ಯಾನೇಜ್‍‍ಮೆಂಟ್. ಪೀಡೆನಾಶಕ ರಹಿತನಿರ್ವಹಣೆ (ಪೀರನಿ ಅನ್ನೋಣ) . ಸಾಹುಕಾರರ ಸಾಲ ಜಾಲಕ್ಕೆ ಸಿಕ್ಕಿ ಅದರಿಂದ ಹೊರಬರಲಾಗದೆ ತೊಳಲಾಡುತ್ತಿದ್ದ ಇಲ್ಲಿನ ಕುಟುಂಬಗಳು ಈಗ ಚಿಗುರುತ್ತಿವೆ. ನಾವು ಭೇಟಿ ಕೊಟ್ಟಾಗ ಮೂರು-ನಾಲ್ಕು ಹೊಸ ಮನೆಗಳ ನಿರ್ಮಾಣ ಆಗುತ್ತಿತ್ತು. ಕಾಯಿಲೆ ಕಸಾಲೆಗಳು ಕಡಮೆಯಾಗಿವೆ. ರಾಸಾಯನಿಕ ಬಳಸಿದರೆ ೫೦,೦೦೦ ರೂ. ದಂಡ ಅಂತ ಈ ಹಳ್ಳಿ ವಿಧಿಸಿದೆ!


ಪೀರನಿ ಪಿಯಸಿ ಕಲಿದಂತೆ. ಸಾವಯವ ಕೃಷಿ ಪದವಿ ಶಿಕ್ಷಣ. ಮೊತ್ತಮೊದಲು ರಾಸಾಯನಿಕ ಕೀಟನಾಶಕಗಳಿಗೆ ಬೈಬೈ.ನಂತರ ರಸಗೊಬ್ಬರಗಳಿಗೆ. ಪರ್ಯಾಯಗಳನ್ನು ಸ್ಥಳೀಯ ಒಳಸುರಿಗಳಿಂದ ತಯಾರಿ. ಈ ದಾರಿಯಲ್ಲಿ ಪರಿವರ್ತನೆಯ ಕೆಲಸ ಬೇಗನೆ ಆಗುತ್ತಿದೆಯಂತೆ. ಸೆಂಟರ್ ಫಾರ್ ಸಸ್ಟೈನೇಬಲ್ ಅಗ್ರಿಕಲ್ಚರ್ ಈ ಕೆಲಸಕ್ಕೆ ತಂತ್ರಜ್ಞಾನದ ಮಾರ್ಗದರ್ಶನ ಮಾಡುತ್ತಿದೆ. ಹೈದರಾಬಾದಿನ ಈ ಸಂಸ್ಥೆಯ ರೂವಾರಿ ಡಾ. ರಾಮಾಂಜನೇಯಲು ಅವರ ಪ್ರಕಾರ ರಾಜ್ಯದ ಏಳು ಲಕ್ಷ ಗ್ರಾಮಗಳಲ್ಲಿ ಈಗ ಪೀರನಿ ಯಶಸ್ವಿ.

ಪೀರನಿ ಸಾವಯವ ಕೃಷಿಗೆ ಒಂದು ಶಾರ್ಟ್ ಕಟ್. ಸಾವಯವ ಕೃಷಿಗೂ ಜಲ ಸಂರಕ್ಷಣೆಗೂ ಹತ್ತಿರದ ಸಂಬಂಧ ಇರುವುದು ಗೊತ್ತಲ್ಲಾ. ಇಂಗಿಸುವ ನೀರಿನಲ್ಲಿ ವಿಷವಿದ್ದರೆ, ಅದರಿಂದ ಲಾಭಕ್ಕಿಂತಲೂ ಹೆಚ್ಚು ನಷ್ಟ.

Thursday, January 8, 2009

ಈ ಕಲ್ಲಿನ ಕೋರೆ ಅರ್ಧ ಕೋಟ್ಯಾಧೀಶ




ಈಚೆಗೆ ತಿರುವನಂತಪುರಕ್ಕೆ ಹೋಗಿದ್ದೆ. ಅಲ್ಲಿನ ಶಾಂತಿಗಿರಿ ಆಶ್ರಮದಲ್ಲಿ ದೊಡ್ಡ ರೀತಿಯಲ್ಲಿ ಮಳೆಕೊಯ್ಲು ಮಾಡುತ್ತಿದ್ದಾರೆ.

ಕಲ್ಲುಬಂಡೆಯ ಕೊರೆಯಲ್ಲಿ ಆಶ್ರಮದ ಎಲ್ಲ ಸೂರುಗಳ ಮಳೆನೀರ ಶೇಖರಣೆ. ಐವತ್ತು ಲಕ್ಷ ಲೀಟರ್. ಈ ಆಶ್ರಮ ಬಹುತೇಕ ಮಳೆ ನೀರಾಧಾರಿತ ಎನ್ನಬಹುದು.