Wednesday, January 28, 2009

ಜಲಸಾಕ್ಷರತೆಯಲ್ಲಿ ಮಂಗಳೂರು ಆಗ್ನೆಸ್ ಕಾಲೇಜಿನ ಮೇಲ್ಪಂಕ್ತಿ



ಮಂಗಳೂರಿನ ಸಂತ ಆಗ್ನೆಸ್ ಕಾಲೇಜು ನೀರಿನ ವಿಷಯದಲ್ಲಿ ತೆಗೆದುಕೊಳ್ಳುವ ಆಸಕ್ತಿ ನಿಜಕ್ಕೂ ಅನುಕರಣೀಯ. ವರ್ಷಗಳ ಹಿಂದೆ ಈ ಕಾಲೇಜು ವಾಮಂಜೂರಿನ ಬಳಿಯ ಕಿರಾಮ್ ಎಂಬ ಹಳ್ಳಿಯಲ್ಲಿ ಅಲ್ಲಿನವರನ್ನು ಪ್ರೇರೇಪಿಸಿ ಮಾಡಿದ ಜಲಾನಯನ ಅಭಿವೃದ್ಧಿಗೆ ಜಿಮ್ ಕಾರ್ಟರ್ ಅಂತಾರಾಷ್ಟ್ರೀಯ ಪ್ರಶಸ್ತಿ ಬಂದಿತ್ತು.

ಕಾಲೇಜು ತನ್ನ ಎಲ್ಲಾ ಶೈಕ್ಷಣಿಕ ವಿಭಾಗಗಳ ಮೂಲಕ ನೀರಿನ ಒಂದಲ್ಲ ಒಂದು ಅಧ್ಯಯನ ಮಾಡಿಸಿದೆ.ಮಂಗಳೂರಿನ ವಿವಿಧ ಕಡೆಗಳ ಬಾವಿ ನೀರಿನ ಮಾದರಿಗಳನ್ನು ವಿಶ್ಲೇಷಿಸಿದೆ. ಇದರಲ್ಲಿ ಹೆಚ್ಚಿನವುಗಳಲ್ಲಿ ಈ-ಕೊಲಿ ಇರುವುದು ಪತ್ತೆಯಾಗಿದೆ. ಹಾಗೆಯೇ ಒಂದಷ್ಟು ಮನೆಗಳಲ್ಲಿ ನೀರಿನ ದೈನಂದಿನ ಬಳಕೆಯ ಬಗ್ಗೆ ಸಮೀಕ್ಷೆ.

ಗುಡ್ಡದ ನೆತ್ತಿಯ ಮೇಲೆ ಇರುವ ಆಗ್ನೆಸ್ ಕಾಲೇಜಿನಲ್ಲಿ ನೀರ ಸಮಸ್ಯೆಇದೆ. ಸುಮಾರು ಏಳೆಕ್ರೆಯಷ್ಟು ವಿಶಾಲವಾದ ಈ ಕ್ಯಾಂಪಸಿನಲ್ಲಿ ಏಳು ತೆರೆದ ಬಾವಿ, ಒಂದು ಕೊಳವೆಬಾವಿ ಇದೆ. ಹೆಚ್ಚು ಮಳೆನೀರು ಹೊರಹರಿದು ಹೋಗುವ ಜಾಗಗಳಲ್ಲಿ ಅದನ್ನು ಇಂಗಿಸುವ ಕೆಲಸವನ್ನೂ ಮಾಡಿದೆ. ಹಿಂದೆಯೂ ಇಂಥ ಕೆಲಸ ಸ್ವಲ್ಪ ಮಾಡಿತ್ತು. ಆದರೆ ಅದು ಬಾವಿಗಳನ್ನು ಲಕ್ಷ್ಯವಿಟ್ಟು ಮಾಡದ ಕಾರಣ ಅಷ್ಟು ಫಲ ಸಿಕ್ಕಿರಲಿಲ್ಲ. ಈ ಬಾರಿ ಇಲ್ಲಿನ ವಾಚನಾಲಯದ ಬಳಿಯ ಬಾವಿಯ ಹತ್ತಿರ ತುಂಬ ನೀರಿಂಗಿಸಿದ್ದಾರಂತೆ. ‘ಮುಂದಿನ ವರ್ಷ ಇದರ ರಿಸಲ್ಟ್ ಬರಬಹುದು’ಎಂಬ ನಿರೀಕ್ಷೆಯಲ್ಲಿದ್ದಾರೆ ಪ್ರಾಂಶುಪಾಲೆ ಸೋದರಿ ಪ್ರೇಮ್ ಡಿ ಸೋಜಾ.

ಕಾಲೇಜ್ ಡೇಗೆ ಸಂಬಂಧಿಸಿ ’ಜಲ್ ಜೀವನ್ ಹೈ’ ಎಂಬ ಅರ್ಥಗರ್ಭಿತ ಹಿಂದಿ ನಾಟಾಕವನ್ನು ಇಲ್ಲಿನ ವಿದ್ಯಾರ್ಥಿನಿಯರು ಪ್ರದರ್ಶಿಸಿದ್ದು ಇನ್ನೊಂದು ವಿಶೇಷ. ಕಾಲೇಜು ಹಿಂದಿ ನಾಟಕ ಅವತರಿಸಿದ್ದು ಇದೇ ಮೊದಲಂತೆ. ಹಿಂದಿ ಪ್ರಾಧ್ಯಾಪಕ ನಾಗೇಶ್ ಅವರ ಈ ನಿಜಕ್ಕೂ ಶ್ಲಾಘನೀಯ.

ಇನ್ನೂ ಒಂದು ವಿಶೇಷ ಎಂದರೆ ಇತರ ಹಲವು ವಿಭಾಗಗಳ ವಸ್ತುಸಂಗ್ರಹಾಲಯದ ಜತೆ ’ಜಲತರಂಗ’ ಎನ್ನುವ ವಾಟರ್ ಮ್ಯೂಸಿಯಮನ್ನೂ ಕಾಲೇಜು ತೆರೆದಿದೆ. ಇಲ್ಲಿ ಮಳೆಕೊಯ್ಲಿನ ಯಶೋಗಾಥೆಗಳ ಫೋಟೋ ಆಲ್ಬಂ, ಸೀಡಿ, ಮಾದರಿಗಳು ಇತ್ಯಾದಿ ಪ್ರದರ್ಶನಕ್ಕಿವೆ. ಮುಂದೆ ಈ ಮ್ಯೂಸಿಯಂ ಇನ್ನೂ ಸುಸಜ್ಜಿತವಾಗಲಿದೆ. ‘ಸಮಾಜಕ್ಕೆ ಈ ತಿಳಿವಳಿಕೆ ಕೊಡುವುದು ಹೇಗೆ ಎಂದು ಚಿಂತಿಸಿದಾಗ ಇದರ ಅಗತ್ಯ ಕಂಡುಬಂತು’ ಎನ್ನುತ್ತಾರೆ ಸೋದರಿ ಪ್ರೇಮ್.

ಸಂತ ಆಗ್ನೆಸ್ ಕಾಲೇಜ್ ಉಳಿದೆಲ್ಲಾ ಶಿಕ್ಷಣಗಳ ಜತೆ ಬದುಕಿಗೆ ಅತ್ಯಗತ್ಯವಾದ ಜಲ ಸಾಕ್ಷರತೆಯನ್ನೂ ಕಲಿಸುತ್ತಾ ಉಳಿದ ಕಾಲೇಜುಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದೆ.

1 comment: