Friday, January 16, 2009

ಕೊಕ್ಕರ್ಣಿ ಎಂಬ ಕೃಷಿ ಹೊಂಡ







ಕೊಕ್ಕರ್ಣೆ ಉಡುಪಿ ಜಿಲ್ಲೆಯ ಒಂದು ಊರು. ನನಗಿದು ಬಹುವಾಗಿ ನೆನಪಾದದ್ದು ಮೊನ್ನೆಮೊನ್ನೆ ಪಾಲಕ್ಕಾಡಿನ ಬಳಿಯ ಸಾವಯವಕ್ಕೆ ತಿರುಗುತ್ತಿರುವ ಹಳ್ಳಿ ಎರುಮೆಯೂರಿಗೆ ಹೋಗಿದ್ದಾಗ. ಇಲ್ಲಿನ ಮುಖ್ಯ ಬೆಳೆ ಭತ್ತ. ಇದು ಮಳೆಯಾಶ್ರಯದ ಬೆಳೆ. ಸುಮಾರು ನೂರೆಕರೆ. ೬೯ ರೈತಕುಟುಂಬ.

ಎರಡು ಗುಡ್ಡಗಳ ನಡುವಿನ ತಗ್ಗಿನ ಭಾಗದಲ್ಲಿ ಊರಿನ ಎಲ್ಲರ ಹೊಲಗಳೂ ಇವೆ. ಎರಡನೆ ಬೆಳೆಗೆ ನೀರಿನ ಕೊರತೆ. ಇಲ್ಲಿನ ವಾರ್ಷಿಕ ಮಳೆ ೧೨೦೦ ಮಿ.ಮೀ. ದೊಡ್ಡ ಸಮಸ್ಯೆಯೆಂದರೆ ಇಲ್ಲಿನ ಗುಡ್ಡಗಳಲ್ಲಿ ಬಂಡೆಗಳೇ ತುಂಬಿವೆ. ಮಣ್ಣು ಇರುವ ಜಾಗ ಅತ್ಯಲ್ಪ. ಹಾಗಾಗಿ ಗುಡ್ಡಗಳಲ್ಲಿ ಮಳೆಕೊಯ್ಲು ಮಾಡಿ ಅಥವಾ ತಲೆಕೊಳ ನಿರ್ಮಿಸಿ ಗದ್ದೆಗಳಲ್ಲಿ ಹೆಚ್ಚು ಕಾಲ ತೇವಾಂಶ ಇರುವಂತೆ ಮಾಡುವ ಅವಕಾಶ ಕಡಿಮೆ.

ಕೆಲವು ಹೊಲಗಳು ಇಷ್ಟರಲ್ಲಿಯೇ ಕರಟಿಬಿಟ್ಟಿದ್ದುವು. ನೋಡುತ್ತಾ ಹೋದಂತೆ ಅಲ್ಲಿಲ್ಲಿ ಕೆಲವು ಹೊಲದ ಅಂಚಿನಲ್ಲಿ ಪುಟ್ಟ ಹೊಂಡ, ನೀರು ಕಂಡಿತು. ಈ ಹೊಂಡಗಳಿಗೆ ಇಲ್ಲಿ ’ಕೊಕ್ಕರ್ಣಿ’ ಎಂದು ಹೆಸರು. ಇದು ಚಿಕ್ಕ ಕೆರೆ ಅಥವಾ ದೊಡ್ಡ ಹೊಂಡ. ಬೇಕಿದ್ದರೆ ಫಾರ್ಮ್ (ಕೃಷಿ ಹೊಂಡ) ಅಂತ ಕರೆಯಬಹುದು. ಪ್ರತಿ ರೈತರೂ ಇಂಥ ಕೊಕ್ಕರ್ಣಿ ರಚಿಸಿಕೊಂಡು ಮಳೆನೀರು ತುಂಬಿಟ್ಟರೆ ನೀರಸಮಸ್ಯೆ ಕುಗ್ಗಬಹುದು. ಗದ್ದೆಯ ಮೇಲ್ಭಾಗದಲ್ಲಿ ಇವನ್ನು ರಚಿಸಬೇಕು. ಆಗ ಈ ನೀರಾಶ್ರಯದಿಂದಾಗಿ ಕೆಳಭಾಗದಲ್ಲಿ ತೇವಾಂಶ ಹೆಚ್ಚು ಕಾಲ ಉಳಿಯುತ್ತದೆ. ಒಂದೋ ಎರಡೋ ರಕ್ಷಕ ನೀರಾವರಿ ( ಪ್ರೊಟೆಕ್ಟಿವ್ ಇರಿಗೇಶನ್) ಬೇಕಾದರೆ ಕೊಡಬಹುದು.

ಇಡೀ ಹಳ್ಳಿಯಲ್ಲಿ ಈಗ ಹತ್ತಿಪ್ಪತ್ತು ಕೊಕ್ಕರ್ಣಿ ಇರಬಹುದು. ಪ್ರತಿ ಕುಟುಂಬವೂ ಒಂದೊಂದು ಮಾಡಿಕೊಂಡರೆ ಎಲ್ಲ ಹೊಲಗಳಲ್ಲೂ ಹೆಚ್ಚು ಕಾಲ ನೀರ ಪಸೆ ಉಳಿದೀತು. ಇದಲ್ಲದೆ ಎರಡನೆ ಬೆಳೆಗೆ ಸ್ವಲ್ಪ ಹೃಸ್ವಾವಧಿಯ ಭತ್ತದ ತಳಿ ಬಳಸುವ, ಶ್ರೀ ಪದ್ಧತಿ ಅನುಸರಿಸುವ ಸಲಹೆಯನ್ನೂ ಕೊಟ್ಟೆವು.

ಕೊಡಗಿನ ಭತ್ತದ ಗದ್ದೆಗಳಿಗೆ ಬೆಂಬಲವಾಗಿ ಹಿಂದೆ ಇಂಥ ಕೆರೆಗಳು ಪಕ್ಕದ ಎತ್ತರದ ಗುಡ್ಡದಲ್ಲಿರುತ್ತಿದ್ದುವು. ಇವು ತಲೆಕೊಳಗಳು. ಅಥವಾ ಪರ್ಕೊಲೇಶನ್ ಪಾಂಡ್‍ಗಳು. ಇವುಗಳ ಕೊಡುಗೆಯನ್ನು ಅರ್ಥ ಮಾಡಿಕೊಳ್ಳದೆ ಹಲವು ರೈತರು ಅವನ್ನು ಮುಚ್ಚಿದ್ದಾರೆ.

ಇಲ್ಲಿ, ಎರುಮಯೂರಿನಲ್ಲಿ ಪಕ್ಕದ ಗುಡ್ಡವಿಡೀ ಕಲ್ಲಾದ ಕಾರಣ ಈ ಮಳೆನೀರಿನ ಹೊಂಡವನ್ನು ಗದ್ದೆಯಲ್ಲೇ ಮಾಡಿದ್ದಾರೆ. ಬಿಹಾರದ ಕೆಲವೆಡೆ ಈ ರೀತಿಯ ಕೊಕ್ಕರ್ಣಿಗಳನ್ನು ಅಲ್ಲಿನ ಪ್ರದಾನ್ ಎಂಬ ಸ್ವಯಂಸೇವಾ ಸಂಘಟನೆ ಪ್ರಚಾರ ಪಡಿಸಿದೆ. ಇದಕ್ಕೆ ೫% ಮಾಡೆಲ್ ಅಂತಲೇ ಹೆಸರು. ಒಂದೆಕರೆ ಗದ್ದೆಯಲ್ಲಿ ಐದು ಸೆಂಟ್ಸನ್ನು ಮಳೆನೀರು ಹಿಡಿದಿಡಲು ಬಳಸುವುದು ಇಲ್ಲಿನ ತತ್ವ.

ಈ ತತ್ವ ಕರ್ನಾಟಕದ ಗದ್ದೆಗಳಿಗೂ ನೀರನಿಶ್ಚಿಂತೆ ಕೊಡಬಲ್ಲುದು. ಹೊಲದಲ್ಲಿ ರಚಿಸುವುದಕ್ಕಿಂತಲೂ ಹೆಚ್ಚಾಗಿ ಪಕ್ಕದಲ್ಲೇ ಗುಡ್ಡವಿದ್ದು ಅವರವರ ಜಮೀನೂ ಇದ್ದರೆ ಅಲ್ಲಿ ’ಕೊಕ್ಕರ್ಣಿ’ ಮಾಡಿಕೊಂಡರೆ ನೀರಲಾಭ ಇನ್ನೂ ಹೆಚ್ಚು.

No comments:

Post a Comment