Thursday, January 29, 2009

ನೀರ ನಿಶ್ಚಿಂತೆಯ ಮೂಕ ಸಾಕ್ಷಿ



ಅದು ಆಂಧ್ರಪ್ರದೇಶ. ವಾರಂಗಲ್ ಜಿಲ್ಲೆಯ ಏನಬಾವಿ. ಸಂಪೂರ್ಣ ಸಾವಯವ ಗ್ರಾಮ. ಯಾರದೋ ಮನೆಯ ಜಗಲಿಯಲ್ಲಿ ಕುಳಿತಿದ್ದೆವು. ಎದುರು ಮನೆಯಲ್ಲಿನ ಅಕ್ಕಿ ಮುಡಿಯಂತಹ ಎರಡು ವಸ್ತುಗಳು ಗಮನ ಸೆಳೆದುವು.

ಹೋಗಿ ವಿಚಾರಿಸಿದರೆ ಅದು ಏತದ ಮೂಲಕ ನೀರೆತ್ತುವ ಉಪಕರಣ. ಕಬ್ಬಿಣದ ತಗಡಿನದು. ತುಕ್ಕು ಹಿಡಿದು ಜೀರ್ಣವಾಗುತ್ತಲಿತ್ತು. ಈ ಗ್ರಾಮದಲ್ಲಿ ನಾಲ್ಕು ದಶಕದ ಹಿಂದೆ ಇವು ಧಾರಾಳ ಬಳಕೆಯಲ್ಲಿದ್ದುವಂತೆ. ೨೫-೩೦ ವರ್ಷ ಹಿಂದೆ ಊರಿಗೆ ವಿದ್ಯುತ್ ಬರುವ ವರೆಗೂ ಇಲ್ಲಿನ ಹೊಲಗಳಿಗೆ ನೀರೆತ್ತಿ ಉಣಿಸಿದ್ದು ಇವುಗಳೇ. ಎತ್ತಿನ ಬಲದಿಂದ ಏತ ನಡೆಯುತ್ತಿತ್ತು.

ಕಾಲಚಕ್ರ ಉರುಳಿದೆ.ಏತ ಮರೆತುಹೋಗಿದೆ. ಆದರೆ ಈ ರೈತ, ಮಲ್ಲೇಶ ಈ ನೀರೆತ್ತುವ ಉಪಕರಣಕ್ಕೊಂದು ಹೊಸ ಕೆಲಸ ಕೊಟ್ಟ. ಕೋಳಿಗೂಡು.ಕೋಳಿಗಳಿಂದಾಗಿ ಇವು ಉಳಕೊಂಡುವು.

ವಿಷಚಕ್ರದಿಂದ ಬಿಡಿಸಿಕೊಂಡ ಏನಬಾವಿ ಈಗ ಮರಳಿ ಬಾಹ್ಯ ಒಳಸುರಿಗಳ ಅವಲಂಬನೆಯಿಲ್ಲದೆ ಕೃಷಿ ನಡೆಸಹತ್ತಿದೆ. ಕಳೆದೆರಡೂ ವರ್ಷಗಳಲ್ಲಿ ನೈಸರ್ಗಿಕ ಕೀಟನಾಶಕಗಳನ್ನೂ ಬಳಸಬೇಕಾಗಿ ಬಂದಿಲ್ಲ ಎನ್ನುತ್ತಾರೆ ಈ ರೈತರು. ಏನಬಾವಿಗೆ ಈಗ ’ಹಳೆಯ ಕಾಲದ ಒಳಿತುಗಳನ್ನು’ ನೆನಪಿಸಿಕೊಳ್ಳುವ ಕುತೂಹಲ.ಮಾನವಶಕ್ತಿಯಿಂದ ನೀರೆತ್ತುವ ತ್ರಾಸ ಅದೆಷ್ಟೇ ಇದ್ದರೂ ಆಗ ನೀರ ನಿಶ್ಚಿಂತೆಯೂ ಇತ್ತು ಎನ್ನುವುದನ್ನು ಈ ’ಕೋಳಿ ಗೂಡು’ ಕೆಲವು ಅಜ್ಜಂದಿರಿಗಾದರೂ ನೆನೆಪಿಸಿಕೊಟ್ಟೀತು.

ಮಲ್ಲೇಶರ ಈ ’ಕೋಳಿಗೂಡಿಗೆ’ ಪುರಾತನ ವಸ್ತುಗಳ ಸಂಗ್ರಹಾಲಯಕ್ಕೆ ಭಡ್ತಿ ಹೊಂದಲು ಬೇಕಾದ ಎಲ್ಲಾ ಗುಣಗಳೂ ಇವೆ!

No comments:

Post a Comment