ನೀರಾವರಿಗೆ ನೀರಿಗಾಗಿ ರೈತರು ಹೊಳೆ-ತೋಡುಗಳಿಗೆ ಅಡ್ಡವಾಗಿ ಕಟ್ಟುವ ಒಡ್ಡಿಗೆ ಕಾಸರಗೋಡು-ದ.ಕ ಭಾಗದಲ್ಲಿ ಕಟ್ಟ ಎಂದು ಹೆಸರು. ಈ ರಚನೆ ತಾತ್ಕಾಲಿಕ. ಪ್ರತಿವರ್ಷ ಮತ್ತೆಮತ್ತೆ ಕಟ್ಟಬೇಕು.
ಸಾಂಪ್ರದಾಯಿಕ ಕಟ್ಟಕ್ಕೆ ಕಲ್ಲು-ಮಣ್ಣು, ಮರದ ಗೆಲ್ಲು, ಸೊಪ್ಪು ಇತ್ಯಾದಿ ಬಳಸುತ್ತಿದ್ದರು. ಮರಳಚೀಲ ಬಳಸಿ ಕಟ್ಟುವ ಕಟ್ಟ ಇದಕ್ಕಿಂತ ಶ್ರಮದ ದೃಷ್ಟಿಯಲ್ಲಿ ಹಗುರ. ಪ್ರತಿ ವರ್ಷ ದೊಡ್ಡ ಪ್ರಮಾಣದ ಮಣ್ಣು ತರುವುದು ಇನ್ನೊಂದು ತಲೆನೋವು. ವಾರಣಾಶಿಯ ಡಾ. ಕೃಷ್ಣಮೂರ್ತಿ ಮಣ್ಣಿಗೆ ಬದಲು ಸಿಲ್ಪಾಲಿನ್ ಹಾಳೆ ಬಳಸಿ ಈ ಕೆಲಸವನ್ನು ಇನ್ನಷ್ಟು ಹಗುರವಾಗಿಸಿದರು. ಈ ಮಾದರಿಗೆ ವಾರಣಾಶಿ ವಿಧಾನ ಎಂದೇ ಹೆಸರಿಟ್ಟರು.
ಚೀಲಕ್ಕೆ ಮರಳು ತುಂಬಲು, ಪೇರಿಸಿಡಲು ತುಂಬ ಕಾರ್ಮಿಕರು ಬೇಕು. ಇದಕ್ಕೆ ಬದಲು ಆಳದ ಮರಳಿನ ತಳ ಇರುವಲ್ಲಿ ಪೋಕ್ಲೈನ್ (ಜೇಸೀಬಿ) ಬಳಸಿ ಮರಳನ್ನು ಪೇರಿಸಿ ಅದರ ಒಳಮೈಗೆ ಅಗ್ಗದ ಪ್ಲಾಸ್ಟಿಕ್ ಹಾಳೆ ಹೊದೆಸಿದರೆ ಸಾಲದೇ? ದರ್ಬೆಯ ವಸಂತಕುಮಾರ್ ಈ ಪ್ರಯೋಗ ಮಾಡಿ ನೋಡಿದರು. ಸಕ್ಸೆಸ್! ಕಾರ್ಮಿಕರ ಕೊರತೆಯ ಈ ದಿನಗಳಲ್ಲಿ ಈ ಅನುಶೋಧನೆ ನಿಜಕ್ಕೂ ಮೆಚ್ಚಿಕೊಳ್ಳಬೇಕಾದದ್ದು.
ಬರೇ ಮರಳಿಗೆ ಪ್ಲಾಸ್ಟಿಕ್ ಬನಿಯನ್ ತೊಡಿಸಿದ ಈ ಹೊಸ ರೀತಿಯ ಕಟ್ಟ ಈ ವರೆಗೆ ಎಂಟು-ಹತ್ತು ರಚನೆ ಆಗಿದೆ. ‘ಬೇಕೆಂದರೆ ನೇತ್ರಾವತಿ ನದಿಗೂ ಇಂಥ ಅಗ್ಗದ ಕಟ್ಟ ಕಟ್ಟಿ ಮಂಗಳೂರಿಗೆ ನೀರು ಒಯ್ಯಬಹುದು; ಒಂದು ಸಿಮೆಂಟ್ ಅಣೆಕಟ್ಟು ಕಟ್ಟುವುದಕ್ಕೆ ಬದಲು ಇಂಥವು ಹತ್ತಿಪ್ಪತ್ತು - ನೂರಾರು ಕಟ್ಟಲು ಸಾಧ್ಯ’ ಎನ್ನುತ್ತಾರೆ ಡಾ.ವಾರಣಾಶಿ ಕೃಷ್ಣಮೂರ್ತಿ ಮತ್ತು ದರ್ಬೆ ವಸಂತಕುಮಾರ್.
ಈ ಇಬ್ಬರು ಗ್ರಾಮೀಣ ಅನುಶೋಧಕರಿಗೆ ಜನವರಿ ಐದರಂದು ಮಂಡ್ಯದ ಯುವದನಿ ಸೇವಾ ಪ್ರತಿಷ್ಠಾನ ಮತ್ತು ಮಂಡ್ಯ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತು ಜಂಟಿಯಾಗಿ ಪ್ರಶಸ್ತಿ ಪ್ರದಾನ ಮಾಡಲಿವೆ.
(ಈ ಕಟ್ಟದ ಬಗ್ಗೆ ಹೆಚ್ಚಿನ ಮಾಹಿತಿಗೆ : ಕಟ್ಟಗಳು, ಅನುಶೋಧನೆಗಳು ಮತ್ತು ವಾರಣಾಶಿ ಮಾದರಿ - ಸಂ: ಶ್ರೀ ಪಡ್ರೆ; ಡಾ.ವಾರಣಾಶಿ ಕೃಷ್ಣಮೂರ್ತಿ. ಪ್ರತಿಗಳಿಗೆ : ವಾರಣಾಶಿ ಸಂಶೋಧನಾ ಪ್ರತಿಷ್ಠಾನ, ಅಂಚೆ: ಅಡ್ಯನಡ್ಕ , ೫೭೪ ೨೬೦ (ದ.ಕ.), ದೂರವಾಣಿ : ೦೮೨೫೫ - ೨೭೦ ೨೫೪, info@varanashi.com)